ಯಾಕೆ ನಿರ್ದಯನಾದೆ
ರಚನೆ: ಶ್ರೀ ಪುರಂದರ ದಾಸರು
ರಾಗ: ಕಾಂಬೋಜಿ
ತಾಳ: ಝಂಪೆ
ಯಾಕೆ ನಿರ್ದಯನಾದೆ ಎಲೊ ದೇವನೆ ||ಪ||
ಶ್ರೀಕಂತ ಎನಮೇಲೆ ಎಳ್ಳಷ್ಟು ದಯವಿಲ್ಲ ||ಅ ಪ||
ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು |
ಹಿಂಗದೆ ಪ್ರಹ್ಲಾದನಪ್ಪಿಕೊಂಡೆ ||
ಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆ |
ಬಂಗರವೆಷ್ಟು ಕೊಟ್ಟನು ಪೇಳೊ ಹರಿಯೆ ||೧||
ಸಿರಿದೇವಿಗ್ಹೇಳದೆ ಸೆರಗು ಸಂವರಿಸಿದೆ |
ಗರುಡನ ಮೇಲೆ ಗಮನವಾಗದೆ ||
ಭರದಿಂದ ನೀ ಬಂದು ಕರಿಯನುದ್ಧರಿದೆ |
ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ ||೨||
ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೇ |
ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೆ ||
ಭಜನೆಗವರೇ ಹಿತರೆ ನಾ ನಿನಗೆ ಅನ್ಯನೇ |
ತ್ರಿಜಗಪತಿ ಸಲಹೆನ್ನ ಪುರಂದರವಿಠಲ ||೩||