ದೇವರನಾಮ: ಏಳೇಳು ಶರಧಿಯು

ರಚನೆ: ಶ್ರ‍ೀ ಪುರಂದರ ದಾಸರು

ರಾಗ: ಸೌರಾಷ್ಟ್ರ

ತಾಳ: ಆಟ

 

ಏಳೇಳು ಶರಧಿಯು ಏಕವಾಗಿದೆ ಕಂಡ್ಯ |

ಹೇಗೆ ಬಂದೆ ಹೇಳೋ ಕೋತಿ ||                    ||ಪ||

ಏಳು ಶರಧಿಯು ಎನಗೆ ಏಳು ಕಾಲುವೆಯು |

ತೂಳಿ ಲಂಘಿಸಿ ಬಂದೆ ಭೂತ                    ||ಅ ಪ||

 

ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ |

ಹೇಗೆ ಬಿಟ್ಟರು ಹೇಳೊ ಕೋತಿ ||

ಏಳು ಸಮುದ್ರದ ಮಕರಿ ಮತ್ಸ್ಯದ ಕೂಡೆ |

ಮಾತಾಡಿ ಬಂದೆನೊ ಭೂತ                    ||೧||

 

ಲಂಕಾದ್ವಾರದೊಳೊಬ್ಬ ಲಂಕಿಣಿ ಇರುವಳು |

ಹೇಗೆ ಬಿಟ್ಟಳು ಹೇಳೊ ಕೋತಿ ||

ಲಂಕಿಣಿಯನು ಕೊಂದು ಶಂಕೆಯಿಲ್ಲದೆ ನಾನು |

ಬಿಂಕದಿಂದಲಿ ಬಂದೆ ಭೂತ                     ||೨||

 

ಕೊಂಬೆಕೊಂಬೆಗೆ ಕೋಟಿಮಂದಿ ರಾಕ್ಷಸರಿರೆ |

ಹೇಗೆ ಬಿಟ್ಟರು ಪೇಳೊ ಕೋತಿ ||

ಕೊಂಬೆ ಕೊಂಬೆಗೆ ಕೋಟಿಮಂದಿ ರಾಕ್ಷಸರನ್ನು |

ಕೊಂದ್ಹಾಕಿ ಬಂದೆನೊ ಭೂತ                    ||೩||

 

ಯಾವೂರೊ ಎಲೊ ನೀನು ಯಾವ ಭೂಮಿಯೊ ನಿಂದು |

ಯಾಕೆ ಬಂದೆ ಹೇಳೊ ಕೋತಿ ||

ಯಾವ ವನದೊಳಗೆ ಜಾನಕಿದೇವಿ ಇದ್ದಾಳೊ |

ಅವಳ ನೋಡಬಂದೆ ಭೂತ                    ||೪||

 

ದಕ್ಷಿಣಪುರಿ ಲಂಕದಾನವರಿಗಲ್ಲದೆ |

ತ್ರ್ಯಕ್ಷಾದ್ಯರಿಗಳವಲ್ಲ ಕೋತಿ ||

ಪಕ್ಷಿಧ್ವಜ ರಾಮನ ಅಪ್ಪಣೆಯೆನಗಿಲ್ಲ |

ಈಕ್ಷಣ ತಪ್ಪಿಸಿಕೊಂಡೆ ಭೂತ                     ||೫||

 

ದೂತನಗಿಹೆ ಎನ್ನ ಕೈಯೊಳು ಸಿಕ್ಕಿಹೆ |

ಕೋಪವಿನ್ನೇತಕ್ಕೊ ಕೋತಿ ||

ನಾ ತಾಳಿಕೊಂಡಿಹೆನೋ ಈ ಕ್ಷಣದಿ ಲಂಕೆ |

ನಿರ್ಧೂಮವನು ಮಾಳ್ಪೆ ಭೂತ                ||೬||

 

ನಿಮ್ಮಂಥ ದಾಸರು ನಿಮ್ಮರಸನ ಬಳಿ |

ಎಷ್ಟು ಮಂದಿದ್ದಾರೆ ಕೋತಿ }}

ನನ್ನಂಥ ದಾಸರು ನಿನ್ನಂಥ ಹೇಡಿಗಳು |

ಕೋಟ್ಯಾನುಕೋಟಿಯೊ ಭೂತ                    ||೭||

 

ಎಲ್ಲಿಂದ ನೀ ಬಂದೆ ಏತಕ್ಕೆಲ್ಲರ ಕೊಂದೆ |

ಯಾವರಸನ ಬಂಟ ಕೋತಿ ||

ಚೆಲ್ವಯೋದ್ಯಾಪುರದರಸು ಜಾನಕಿಪತಿ |

ರಾಮಚಂದ್ರನ ಬಂಟ ಭೂತ                 ||೮||

 

ಸಿರಿರಾಮಚಂದ್ರನು ನಿನ್ನರಸನಾದರೆ |

ಆತ ಮುನ್ನಾರ‍್ಹೇಳೋ ಕೋತಿ |

ಹಿರಣ್ಯಕನನು ಸೀಳಿ ಪ್ರಹ್ಲಾದಗೊಲಿದ ಶ್ರೀ |

ಪುರಂದರವಿಠಲನೊ ಭೂತ                    ||೯||